ನಿಜವಾಯಿತು ಸಿಎಜಿ ಆಕ್ಷೇಪಣೆ, ಇಲಾಖೆಯ ಕುರುಡು ನೆಪ.
ವರದಿ – ಶ್ರೀ ಯತೀಶ್ ಕುಮಾರ್ ಟಿ ಎಂ ಸಿ.
ಕಾರ್ಮಿಕರಿಗೆ ಸಂಬಂಧಿಸಿದ ಮಂಡಳಿಗಳಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಹೊಸ ಪುರಾವೆ ಸಿಕ್ಕಿದೆ. ಕಾರ್ಮಿಕರ ಹೆಸರಿನಲ್ಲಿ ಪಾರದರ್ಶಕತೆ ಮರೆಮಾಚಿ ಖಾಸಗಿ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟಿರುವ, ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕಾದ ಯೋಜನೆಗಳಲ್ಲಿ ಅನ್ಯರಿಗೆ ಪಾಲು ನೀಡಿರುವ ಸಂಗತಿ ಬಯಲಾಗಿದೆ. ಇದಿಷ್ಟೇ ಅಲ್ಲ, 2-3 ವರ್ಷದ ಹಿಂದೆ ಆಗಿರುವ ಲೋಪಗಳನ್ನು ಸರ್ಕಾರ ಒಪ್ಪಿಕೊಂಡಿರುವ ದಾಖಲೆ ಕೂಡ ಲಭ್ಯವಾಗಿದೆ.
ಕಾರ್ಮಿಕ ಇಲಾಖೆ ಅಧೀನದಲ್ಲಿ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯನಿರ್ವಹಿಸುತ್ತವೆ. ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಕುರಿತು ಲೆಕ್ಕಪರಿಶೋಧನೆ ನಡೆಸಿದ್ದರು. ಇದೇ ವೇಳೆ ಸರ್ಕಾರ ಕೂಡ ಸಿಎಜಿ ಎತ್ತಿದ್ದ ಆಕ್ಷೇಪಣೆಗೆ ಉತ್ತರ ನೀಡಿದ್ದು ಹಲವು ಲೋಪ ಒಪ್ಪಿಕೊಂಡಿದೆ. ಮತ್ತೆ ಕೆಲವು ಉತ್ತರ ಸಮರ್ಪಕವಾಗಿಲ್ಲದೇ ಇರುವುದು ಕಂಡುಬಂದಿದೆ.
ಪಾರದರ್ಶಕತೆ ಕೊರತೆ: ಒಟ್ಟು 8,49,084 ಫಲಾನುಭವಿಗಳು ಮತ್ತು
ಅವರ ಅವಲಂಬಿತರಿಗೆ ಮುಂಜಾಗ್ರತಾ ಆರೋಗ್ಯ ತಪಾಸಣೆ ಮತ್ತು ತರಬೇತಿ ನೀಡಲಾಗಿದೆ. ಇದಕ್ಕಾಗಿ 258.79 ಕೋಟಿ ರೂ. (2023 ಡಿಸೆಂಬರ್) ಖರ್ಚು ಮಾಡಲಾಗಿದೆ. ಐದು ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮುಂಜಾಗ್ರತಾ ಆರೋಗ್ಯ ತರಬೇತಿ ಮತ್ತು ತಪಾಸಣೆ -ನಡೆಸಲು ಕೈಗೊಂಡ ಕಾರ್ಯಕ್ರಮದಲ್ಲಿ ವ್ಯತ್ಯಾಸವಾಗಿರುವುದು ಗಮನಕ್ಕೆ ಬಂದಿದೆ. ಈ ಸೇವೆ ಪಡೆದುಕೊಳ್ಳಲು ಪ್ರತಿ ಜಿಲ್ಲೆಯಿಂದಲೂ ನಿಖರವಾಗಿ ಮೂರು ದರಪಟ್ಟಿ ಸ್ವೀಕರಿಸಲಾಗಿದೆ.
ನಕಲಿ
ನಮೂದುಗಳ ಸಂಖ್ಯೆ 1,27,635,
ಒಬ್ಬನೇ ವ್ಯಕ್ತಿ, ಹಲವು ಬಾರಿ ಪರೀಕ್ಷೆ.
ಒಂದೇ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಬಾರಿ ನಡೆಸಿದ ಪರೀಕ್ಷೆಗಳಿಗೆ ಪಾವತಿ ಮಾಡಿರುವ ಸಂಗತಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಒಂದು ಹೆಸರು ಮತ್ತು ಕಾರ್ಮಿಕರ ಗುರುತಿನ ಚೀಟಿ ಬಳಸಿಕೊಂಡು ಒಂದೇ ವ್ಯಕ್ತಿಗೆ ಅನೇಕ ಬಾರಿ ಪರೀಕ್ಷೆ ನಡೆಸಿರುವುದಾಗಿ ತೋರಿಸುವ ಮೂಲಕ ಏಜೆನ್ಸಿಗಳು ಬಿಲ್ ನೀಡಿವೆ. ಒಬ್ಬ ವ್ಯಕ್ತಿಯನ್ನು 29 ಬಾರಿ ಪರೀಕ್ಷೆ ಮಾಡಿದ ದಾಖಲೆಯೂ ಗಮನಾರ್ಹ ಸಂಗತಿ. ಒಟ್ಟು ಪಟ್ಟಿಯಲ್ಲಿ ಪತ್ತೆಯಾದ ಒಟ್ಟು ನಕಲಿ ನಮೂದುಗಳ ಸಂಖ್ಯೆ 1,27,635 ಆಗಿದ್ದು, ಕಾರ್ಮಿಕ ಇಲಾಖೆ ಅಧಿಕಾರಿಗಳು ವಿವರಗಳನ್ನು ಪರಿಶೀಲಿಸದೆ ಬಿಲ್ಲುಗಳಿಗೆ ಪಾವತಿ ಮಾಡಿದ್ದಾರೆ. ಈ ನಕಲಿ ನಮೂದುಗಳಿಗೆ ಪಾವತಿಸಿದ ಮೊತ್ತವು 37.65 ಕೋಟಿ ರೂ. (ತಲಾ 2,950 ರೂ.) ಸರಿಯಾದ ಪರಿಶೀಲನಾ ಪ್ರಕ್ರಿಯೆ ಕೊರತೆ ಮತ್ತು ಹೆಚ್ಚಿನ ಸಂಖ್ಯೆಯ ನಕಲಿ ನಮೂದುಗಳು ಪರೀಕ್ಷಾ ಫಲಿತಾಂಶಗಳ ವಂಚತೆಯನ್ನು ಎತ್ತಿ ತೋರಿಸಿದೆ ಎಂದು ಸಿಎಜಿ ಸ್ಪಷ್ಟವಾಗಿ ಹೇಳಿದೆ.
ನಮೂದು ದೋಷವಂತೆ
ಒಂದೇ ವ್ಯಕ್ತಿಯನ್ನು ಅನೇಕ ಬಾರಿ ಪರೀಕ್ಷಿಸುವ ಸಾಧ್ಯತೆಯು ದತ್ತಾಂಶ ನಮೂದು ಮಾಡುವಾಗಿನ ದೋಷಗಳಿಂದಾಗಿ ಆಗಿದೆ ಎಂದು ಸರ್ಕಾರ (2024 ಆಗಸ್ಟ್) ಹೇಳಿದೆ. ಈ ಉತ್ತರವನ್ನು ಸಿ ಎ ಜಿ ಸ್ವೀಕರಾಹರ್ವವಲ್ಲ ಎಂದಿದೆ.
ಅನರ್ಹರು, ಅಪ್ರಾಪ್ತರಿಗೂ ಪರೀಕ್ಷೆ!
ಕಾರ್ಮಿಕರ ಆರೋಗ್ಯ ಪರೀಕ್ಷೆ ಹೆಸರಲ್ಲಿ ಅಪ್ರಾಪ್ತರಿಗೂ ಪರೀಕ್ಷೆ ಎಂದು ಹಣ ಬಿಡುಗಡೆ ಮಾಡಲಾಗಿದೆ. ಒಪ್ಪಂದ ನಿಯಮ ಮತ್ತು ಷರತ್ತುಗಳ ಪ್ರಕಾರ ನೋಂದಾಯಿತ ಕಾರ್ಮಿಕರು ಮತ್ತು 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಅವರ ಅವಲಂಬಿತರಿಗೆ ಪರೀಕ್ಷೆ ನಡೆಸಬೇಕು. ಆದರೂ 79,280 ಅಪ್ರಾಪ್ತ ವಯಸ್ಕರಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಲೆಕ್ಕ ತೋರಿಸಲಾಗಿದೆ. ಹೀಗೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅವಲಂಬಿತರಿಗೆ ಪಾವತಿಸಿದ ಮೊತ್ತ 23.38 ಕೋಟಿ ರೂ. ಎಂಬುದು ಅಚ್ಚರಿಯ ಸಂಗತಿ. ವೈದ್ಯಕೀಯ ತಂಡವು ಗುರುತಿನ ಚೀಟಿ ಹೊಂದಿರುವವರು ಅಥವಾ ಅವರ ಅವಲಂಬಿತರಲ್ಲದ ಜನರ ಮೇಲೆ ಕೂಡ ಪರೀಕ್ಷೆ ನಡೆಸಿದೆ ಎಂದು ದಾಖಲೆ ಸೃಷ್ಟಿಸಿದೆ. ಇದಕ್ಕಾಗಿ 12.71 ಲಕ್ಷ ರೂ. ಪಾವತಿಸಲಾಗಿದೆ.
ಇದಕ್ಕೆ ಮುಖ್ಯ ಕಾರಣ ಕಾರ್ಮಿಕ ಸಂಘಗಳ ಮುಖ್ಯಸ್ಥರನ್ನು ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ಮಂಡಳಿ ರಚನೆ ಮಾಡದೆ ಅಧಿಕಾರಿಗಳ ದುರಾಡಳಿತಕ್ಕೆ ಕಾರಣವಾಗಿದೆ.
ಸನ್ಮಾನ್ಯ ಕರ್ನಾಟಕ ಕಾರ್ಮಿಕ ಸಚಿವರು- ಮಾನ್ಯ ಶ್ರೀ ಸಂತೋಷ್ ಎಸ್ ಲಾಡ್ ರವರು.
ಕರ್ನಾಟಕ ಕಾರ್ಮಿಕ ಇಲಾಖೆ ಆಯುಕ್ತರು- ಡಾ. ಹೆಚ್. ಎನ್. ಗೋಪಾಲಕೃಷ್ಣ.





